ಅಂಗವಿಕಲ ಮಕ್ಕಳಿಗೆ ಒಂದೂವರೆ ದಶಕಗಳಿಂದ ನೆರವಾಗುತ್ತಾ, ಅವರ ಜಗತ್ತಿನ ಒಡನಾಡಿಯಂತೆ ಕಾರ್ಯನಿರ್ವಹಹಿಸುತ್ತಾ ಬಂದಿರುವವರು ಅನುತೇಜಾ. ಮೂಲತಃ ಕಿರುತೆರೆ, ಹಿರಿತೆರೆ ನಟಿಯೂ ಆಗಿರುವ ಅನುತೇಜಾ ಅಂಗವಿಕಲ ಮಕ್ಕಳನ್ನೇ ಸೇರಿಸಿಕೊಂಡು ‘ಅರಳುವ ಹೂವುಗಳು ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಟೌನ್ಹಾಲ್ನಲ್ಲಿ ವಿಶಿಷ್ಟವಾಗಿ ನೆರವೇರಿದೆ.
ಸಾ.ರಾ ಗೋವಿಂದು, ಭಗವಾನ್ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳಿಗೆ ವೀಲ್ಚೇರ್ ವಿತರಣೆ ನಡೆಸಿ, ಅದೇ ವೇದಿಕೆಯಲ್ಲಿ ಅರಳುವ ಹೂವುಗಳು ಸಿನಿಮಾದ ಧ್ವನಿಸುರುಳಿ ಬಿಡುಗಡೆಯನ್ನೂ ಅರ್ಥಪೂರ್ಣವಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಸಾ.ರಾ ಗೋವಿಂದು ಹಾಗೂ ಭಗವಾನ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜಿ.ಮೂರ್ತಿ ನಿರ್ದೇಶನದ ಈ ಚಿತ್ರವನ್ನು ಅನುತೇಜಾ ಅವರೇ ನಿರ್ಮಾಣ ಮಾಡಿದ್ದಾರೆ.
ಅನುತೇಜಾ ಈಗಾಗಲೇ ಸಾಕಷ್ಟು ಸಿಒನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕ ಎಸ್.ಕೆ ಭಗವಾನ್ರ ಶಿಷ್ಯೆಯೂ ಆಗಿರುವ ಇವರು ಹದಿನೈದು ವರ್ಷಗಳಿಂದೀಚೆಗೆ ಅನ್ನಪೂರ್ಣ ಚಾರಿಟೆಬಲ್ ಟ್ರಸ್ಟ್ ಮೂಲಕ ಅಂಗವಿಕಲ ಮಕ್ಕಳಿಗೆ ನೆರವಾಗುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹೀಗೆ ವಿಕಲಚೇತನ ಮಕ್ಕಲೊಂದಿಗೆ ಕಲೆತ ಪರಿಣಾಮವಾಗಿ ಆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಸಿನಿಮಾವೇ ಪ್ರಭಾವಿ ಮಾಧ್ಯಮ ಎಂದು ಮನಗಂಡ ಅನುತೇಜಾ ‘ಅರಳುವ ಹೂವುಗಳು ಸಿನಿಮಾ ಮಾಡಿದ್ದಾರೆ.
ಈ ಚಿತ್ರದಲ್ಲಿ ಎರಡೂ ಕೈಯಿಲ್ಲದ ಆಂಜಿ ಎಂಬ ಹುಡುಗನೇ ನಾಯಕನಾಗಿ ನಟಿಸಿದ್ದಾನೆ. ಇನ್ನುಳಿದಂತೆ ಇಪ್ಪತೈದು ಅಂಗವಿಕಲ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂಗವೈಕಲ್ಯವನ್ನೂ ಮೀರಿ ಸಾಧನೆ ಮಾಡಬಹುದೆಂಬ ಸಂದೇಶವನ್ನು ಅನುತೇಜಾ ಈ ಚಿತ್ರದ ಮೂಲಕ ಸಾರುವ ಪ್ರಯತ್ನ ಮಾಡಿದ್ದಾರಂತೆ.
ವಿನಯಾ ಪ್ರಸಾದ್, ರಮೇಶ್ ಭಟ್, ಸುಂದರಂ ಮಾಸ್ಟರ್ ಸೇರಿದಂತೆ ಅನೇಕ ಪ್ರಸಿದ್ಧ ನಟ ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೆನ್ಸಾರ್ ಮಂಡಳಿ ಕಡೆಯಿಂದ ಯು ಸರ್ಟಿಫಿಕೆಟ್ ಸಿಕ್ಕಿದೆ. ಸೆನ್ಸಾರ್ ಮಂಡಳಿಯವರೂ ಅತ್ಯುತ್ತಮ ಸಂದೇಶ ನೀಡುವ ಚಿತ್ರ ಎಂದು ಮೆಚ್ಚುಗೆ ಸೂಚಿಸಿದ್ದಾರೆ.